ಹೀಗೊಂದು ವಿಶಿಷ್ಟ ಟೆಂಟ್ ಶಾಲೆ
ಜೀವನೋಪಾಯಕ್ಕಾಗಿ ಜನರು ದೇಶದಿಂದ ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋದರೆ ಅನಿವಾಸಿ ವಲಸೆಗಾರರ ಮಕ್ಕಳ ಕಲಿಕೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳು ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ.
ಅನೇಕ ಮಂದಿ ಕೂಲಿಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕಿಂತ ತಮ್ಮ ಹೊಟ್ಟೆಪಾಡಿನ ಎರಡೊತ್ತಿನ ತುತ್ತಿನ ಚೀಲ ತುಂಬಿಕೊಳ್ಳುವ ದೃಷ್ಟಿಯಿಂದ ಬೇರೆಡೆಗೆ ವಲಸೆ ಹೋಗುತ್ತಾರೆ. ಊರಿಂದೂರಿಗೆ ಅಲೆದಾಡುವ ಈ ಅಲೆಮಾರಿಗಳ ಮಕ್ಕಳಿಗೆ ಶಿಕ್ಷಣ ತಪ್ಪಬಾರದೆಂಬ ಆಶಯದಿಂದ ಟೆಂಟ್ ಶಾಲೆ ಅಥವಾ ಗುಡಾರ ಶಾಲೆ ಅರ್ಥಾತ್ ಕುಟೀರ ಶಾಲೆ ಪರಿಕಲ್ಪನೆ ಸರ್ವಶಿಕ್ಷಣ ಅಭಿಯಾನದಡಿ ರೂಢಿಗೆ ಬಂತು.
ದೇವನಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಡಿಯಂಚಿನ ಹುರುಳುಗುರ್ಕಿ ರೈಲ್ವೆ ಗೇಟ್ ಮತ್ತು ರಾಷ್ಟ್ರೀಯ ಹೆದ್ದಾರಿ ಏಳರ ಪಕ್ಕ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು ಸಮೀಪ ಆರಂಭವಾಗಿರುವ ಟೆಂಟ್ಶಾಲೆಯಲ್ಲಿ ಪ್ರಾರಂಭದಿಂದ ಈವರೆಗೆ 253 ಮಕ್ಕಳು ದಾಖಲಾಗಿದ್ದಾರೆ. ಪ್ರಸ್ತುತ 40-50 ಮಕ್ಕಳು ನಿರಂತರವಾಗಿ ಕಲಿಯುತ್ತಿದ್ದಾರೆ.
ಶಾಲೆಯಿಂದ ಹೊರಗುಳಿದ, ಶಾಲೆಗೆ ಸೇರದ, ಮಧ್ಯದಲ್ಲಿಯೇ ಶಾಲೆಬಿಟ್ಟ 6 ರಿಂದ 14 ವರ್ಷದ ಮಕ್ಕಳ ಶಿಕ್ಷಣಕ್ಕಾಗಿ ವಲಸೆ ಕುಟುಂಬಗಳ ಬಿಡಾರಗಳ ಹತ್ತಿರವೇ ಗುಡಾರ ಶಾಲೆಯನ್ನು ತೆರೆಯಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಸಿ.ಆರ್.ಸಿ.ವ್ಯಾಪ್ತಿಗೆ ಸೇರಿದ ಟೆಂಟ್ ಶಾಲೆ ಅಪರೂಪದ್ದೆಂದೇ ಹೇಳಬೇಕು
ತಮಿಳುನಾಡಿನ ಮುತ್ತುಬಂಡೆ ಕೆಲಸಗಾರರ ಮಕ್ಕಳಿಗಾಗಿ 2006ರ ಜೂನ್ 27 ರಂದು ಈ ಟೆಂಟ್ ಶಾಲೆಯನ್ನು ಪ್ರಾರಂಭಿಸಲಾಯಿತು. ಇಂದು ಈ ಶಾಲೆ ``ರಾಜ್ಯದ ಅತ್ಯುತ್ತಮ ಮಾದರಿ ಟೆಂಟ್ ಶಾಲೆ'' ಎಂದರೆ ತಪ್ಪಾಗಲಾರದು. ಈ ಶಾಲೆಯಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ ಬಂಗಾಲಿ, ಓಡಿಯಾ, ಅಸ್ಸಾಮಿ, ಬಿಹಾರಿ, ಉರ್ದು, ಹಿಂದಿ ಹೀಗೆ ಹಲವು ಭಾಷೆ ಮಾತನಾಡುವ ಮಕ್ಕಳಿದ್ದಾರೆ. ದೇಶದ ಬಹುತೇಕ ರಾಜ್ಯಗಳ ವಲಸೆ ಮಕ್ಕಳು ಕಲಿಯುತ್ತಿದ್ದು, ಇದೊಂದು ``ಮಿನಿ ಇಂಡಿಯಾ ಟೆಂಟ್ ಪಾಠಶಾಲೆ''ಯಾಗಿದೆ.ಅನ್ಯರಾಜ್ಯಗಳ, ಅನ್ಯಸ್ಥರದ ಮಕ್ಕಳು ಕನ್ನಡ ಅಕ್ಷರ ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ಮಗು ಇತರ ಭಾಷೆಗಳನ್ನು ಅನಾಯಾಸವಾಗಿ ಕಲಿಯುತ್ತಿದೆ.
ಈ ಶಾಲೆಯಲ್ಲಿ ಬಹುಭಾಷೆ ಬಲ್ಲ ಸ.ಹಿ.ಪ್ರಾ.ಪಾಠಶಾಲೆ ವೆಂಕಟಗಿರಿಕೋಟೆಯ ಸಹಶಿಕ್ಷಕರಾದ ಬಿ.ಜಿ. ಗುರುಸಿದ್ಧಯ್ಯನವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅವಿದ್ಯಾವಂತ ನಿರಾಶ್ರಿತ ಕೂಲಿ ಕಾರ್ಮಿಕರ ಮಕ್ಕಳಿಗೆ ಅವರವರ ಮಾತೃಭಾಷೆಯೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಕಲಿಸುತ್ತಿದ್ದಾರೆ. ಹಾಗಂತ ಈ ಪುಟಾಣಿಗಳು ತಾವು ಕಲಿತ ಭಾಷೆಯ ಪ್ರವೀಣರು ಎಂದು ಹೇಳಲಾಗದು ತಮ್ಮ ಪರಿಸರದ ಮಾತುಕತೆಗೆ ತಕ್ಕಂತೆ ಇತರ ಭಾಷೆ ಕಲಿಯುತ್ತಿದ್ದಾರೆ. ಕೆಲವೊಮ್ಮೆ ಬೇರೆ ಭಾಷೆ ಮಾತನಾಡಲು ಬಾರದಿದ್ದರೂ ಅರ್ಥ ಗ್ರಹಿಸಿ ಸ್ಪಂದಿಸಬಲ್ಲರು ಶಾಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಂಗ್ಲಿಷನ್ನು ಕಲಿಸಲಾಗುತ್ತಿದೆ. ಕೆಲವು ಹಿರಿಯ ಮಕ್ಕಳು ಬಂಡೆ ಹೊಡೆಯುವ ಕೆಲಸಕ್ಕೆ ಹೋಗುತ್ತಾರೆ. ಈ ಮಕ್ಕಳನ್ನೂ ಓಲೈಸಿ ಶಾಲೆಗೆ ಕರೆತರುತ್ತಾರೆ ಶಿಕ್ಷಕ ಗುರುಸಿದ್ಧಯ್ಯ.
ಸದಾ ರಸ್ತೆಗಳಲ್ಲಿ, ಮರಗಳ ಬಳಿ ಅಲೆಯುತ್ತಾ ಬಂಡೆ-ಕಲ್ಲು, ಮಣ್ಣಿನ ಜೊತೆ ಆಡುತ್ತಾ ಕೆದರಿದ ಕೂದಲು, ಸಿಂಬಳದ ಮುಖ, ಹರಕಲು ಬಟ್ಟೆ ತೊಟ್ಟು, ಅತ್ತಿತ್ತ ಅಲೆದಾಡುತ್ತಿದ್ದ ಕಡುಬಡತನದ ನಿರಾಶ್ರಿತ ವಲಸೆ ಮಕ್ಕಳು ಇಂದು ಟೆಂಟ್ ಶಾಲೆ ಸೇರಿ
ಕಲಿಯುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ.
ಟೆಂಟ್ ಶಾಲೆ ನಿರ್ವಹಣೆ ಅಷ್ಟು ಸುಲಭವಲ್ಲ, ವಯೋಸಹಜ ಆಟದ ಹಂಬಲದಲ್ಲಿ ಶಾಲೆಯ ಚೌಕಟ್ಟನ್ನು ಮಕ್ಕಳು ಇಷ್ಟಪಡುವುದಿಲ್ಲ. ದೂರದ ರಾಜ್ಯದ ಕಾರ್ಮಿಕರಿಗೆ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ ಉದಾಸೀನ, ಬಿಡಾರದಲ್ಲಿ ಇದ್ದರೆ ಮನೆ ಕೆಲಸಕ್ಕೆ ಸಹಾಯವಾಗುತ್ತದೆ. ಚಿಕ್ಕ ಮಗು ಎತ್ತಿಕೊಳ್ಳಲು ಅನುಕೂಲ, ಹೊಟ್ಟೆಪಾಡು ಬಗೆಹರಿದರೆ ಸಾಕು, ಶಾಲೆ ಬೇಡ ಎಂಬ ಧೋರಣೆ ಅವರದು. ದೂರದಿಂದ ಬಂದ ನಮಗೆ ಇಲ್ಲಿ ಶಾಲೆ ಎಂದರೆ ಏನೋ ಹೇಗೋ ಎಂಬ ಆತಂಕ, ಅಲ್ಲದೆ ಭಾಷೆ ಸಮಸ್ಯೆ ಬೇರೆ ಹೀಗಾಗಿ ಹಿಂದೇಟು ಜಾಸ್ತಿ, ಗುರುಸಿದ್ಧಯ್ಯ ಪ್ರತಿಯೊಬ್ಬ ಕಾರ್ಮಿಕ ಕುಟುಂಬದವರನ್ನು ಭೇಟಿ ಮಾಡಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಕೋರುತ್ತಾರೆ. ಕುಟುಂಬದ ಸ್ನೇಹಿತರಂತೆ ಅವರ ಜೊತೆ ಸೇರುತ್ತಾರೆ. ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.
ಟೆಂಟ್ ಶಾಲೆ ಮತ್ತು ಚಿಣ್ಣರಿಗೆ ದಾನಿಗಳು, ಸಮಾಜಸೇಕರು, ಸಂಘಸಂಸ್ಥೆಗಳ ನೆರವಿನೊಂದಿಗೆ ಶಾಲೆ ಪ್ರಾರಂಭವಾದಾಗಿನಿಂದ ಇದುವರೆವಿಗೆ ಹನ್ನೆರಡು ಲಕ್ಷಕ್ಕೂ ಹೆಚ್ಚಿನ ಮೊತ್ತದ ಮೂಲಭೂತ ಸೌಲಭ್ಯಗಳು ಲಭಿಸಿವೆ.
ಟೆಂಟ್ ಶಾಲೆಯಲ್ಲಿ ನೈಜ ಶಾಲೆಗಳಿಗಿಂತ ಹೆಚ್ಚಿನದಾದ ವಿವಿಧ ರೀತಿಯ ಕಲಿಕೋಪಕರಣಗಳು ಹಾಗೂ ಶಾಲೆ ಸುತ್ತ ಮುತ್ತ ಅಕ್ಷರ ಕಲಿಕೆಗೆ ಪೂರಕವಾದ ವಾತಾವರಣವುಳ್ಳ ಸುಂದರವಾದ ಶಾಲಾ ಕೈತೋಟವಿದೆ.
ಕೂಲಿ ಕಾರ್ಮಿಕರ ಮಕ್ಕಳು, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರ್ಣವಾಗಿ ಪಡೆಯುತ್ತಾರೆ ಎಂದೇನಲ್ಲ, ಕೆಲವೊಮ್ಮೆ ವಲಸೆ ಮಕ್ಕಳು ಪೋಷಕರೊಂದಿಗೆ, ಸ್ವಗ್ರಾಮಕ್ಕೆ ಇಲ್ಲವೆ ಬೇರೆಡೆ ಕೂಲಿ ಕೆಲಸಕ್ಕಾಗಿ ವಲಸೆ ಹೋದಾಗ ಅವರಿಗೆ ವಲಸೆ ಕಾರ್ಡು ನೀಡುವ ಸೌಲಭ್ಯವೂ ಯೋಜನೆಯಲ್ಲಿದೆ. ಈ ಕಾರ್ಡು ದೇಶದ ಯಾವುದೇ ಭಾಗದಲ್ಲೂ ಮಾನ್ಯತೆ ಪಡೆಯುತ್ತದೆ.
ಮಕ್ಕಳನ್ನು ವಾರಕ್ಕೊಮ್ಮೆ ಅಕ್ಕಪಕ್ಕದ ಶಾಲೆಗಳಿಗೆ ಹೊರಸಂಚಾರ ಕರೆದುಕೊಂಡು ಹೋಗಿ ಬೆಳಗಿನಿಂದ ಸಂಜೆಯವರೆಗೆ ಮುಖ್ಯವಾಹಿನಿ ಶಾಲೆಯ ಮಕ್ಕಳ ಪಾಠ ಪ್ರವಚನ, ಆಟೋಟಗಳಲ್ಲಿ ಬೆರೆಯುವಂತೆ ಮಾಡುವುದಲ್ಲದೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಿಸಿ ಹೊರಗಿನ ಜನರ ಭಾಷೆ, ವರ್ತನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾಮಾನ್ಯ ಶಾಲೆಗಳಲ್ಲಿ ನಡೆಯುವಂತೆ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿ ನಮ್ಮ ರಾಜ್ಯ-ರಾಷ್ಟ್ರಪರಂಪರೆ, ಇತಿಹಾಸದತ್ತ ಮಕ್ಕಳ ಗಮನ ಸೆಳೆಯಲಾಗುತ್ತಿದೆ.
ಮಕ್ಕಳ ಆರೋಗ್ಯ ಹದಗೆಟ್ಟರೆ ಶಿಕ್ಷಕ ಗುರುಸಿದ್ದಯ್ಯ ತಮ್ಮ ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ. ಅಲ್ಲದೆ ಶಾಲೆಯಲ್ಲಿ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳೂ ಶಾಲೆಯಲ್ಲಿ ಸದಾ ಲಭ್ಯ.
ಟೆಂಟ್ ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದ ಅಸ್ಸಾಂ ರಾಜ್ಯದ ಕುಮಾರಿ ಬಾಲಿಕಾ ಚಿಕ್ಕಬಳ್ಳಾಪುರದ ಜಿಲ್ಲೆಯ ನಂದಿ ಗ್ರಾಮ ಬೃಂದಾವನ ಖಾಸಗಿ ಶಾಲೆಯಲ್ಲಿ, ಆಂದ್ರಪ್ರದೇಶದ ಸಿರಿಸಾ ಕಸ್ತೂರಿಬಾ ವಸತಿ ಶಾಲೆಯಲ್ಲಿ ವಲಸೆ ಕಾಡರ್ಿನ ಆಧಾರದಲ್ಲಿ ಪ್ರವೇಶ ಪಡೆದು ಸಾಮಾನ್ಯ ಶಿಕ್ಷಣ ಪಡೆಯುತ್ತಿದ್ದಾರೆ. 2007- 08ನೇ ಸಾಲಿನಲ್ಲಿ ಈ ಟೆಂಟ್ಶಾಲೆಗೆ ಅತ್ಯುತ್ತಮ ಟೆಂಟ್ ಶಾಲೆ ಪ್ರಶಸ್ತಿ ಹಾಗೂ ಇಲ್ಲಿನ ಶಿಕ್ಷಕ ಬಿ.ಜಿ. ಗುರುಸಿದ್ಧಯ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿ ಟೆಂಟ್ ಶಾಲೆಯ ಹಿರಿಮೆ ಹೆಚ್ಚಿಸಿದ್ದಾರೆ.
ಈ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿಯಿತ್ತು, ನೈಜ ಶಾಲೆಗಳನ್ನು ನಾಚಿಸುವಂತಹ ಕಲಿಕಾ ವಾತಾವರಣ ಈ ಟೆಂಟ್ ಶಾಲೆಯಲ್ಲಿದೆ, ಮಕ್ಕಳು ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವ ವ್ಯವಸ್ಥೆ ತುಂಬಾ ಚೆನ್ನಾಗಿದ್ದು, ಅನ್ಯಭಾಷಿಕರಾದಂತ ವಲಸಿಗರ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕ ಗುರುಸಿದ್ದಯ್ಯನವರ ಸೇವಾ ಮನೋಭಾವ, ಕಾರ್ಯದಕ್ಷತೆ ತ್ಯಾಗಗುಣ ಅವಿಸ್ಮರಣೀಯ ಎಂದಿದ್ದಾರೆ.
ಈ ವಿಶಿಷ್ಟ ಶಾಲೆಗೆ ಇಲಾಖೆವತಿಯಿಂದ ಟೆಂಟ್ ಶಾಲಾ ನಿರ್ಮಾಣ ವೆಚ್ಚ, ಸ್ನಾಕ್ಸ್ ಸೌಲಭ್ಯ, ಬಿಸಿಯೂಟ ಸೌಲಭ್ಯ, ಸ್ವಯಂಸೇವಕರ ಗೌರವಧನ, ಕಲಿಕಾ ಸಾಮಗ್ರಿ ವೆಚ್ಚ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ ಸೌಲಭ್ಯಗಳು ಲಭ್ಯವಿರುತ್ತದೆ.
ಈ ಟೆಂಟ್ ಶಾಲೆಗೆ ಹಲವಾರು ಜನಪ್ರತಿನಿಧಿಗಳು ಭೇಟಿ ನೀಡಿ ನಮ್ಮ ರಾಜ್ಯದ ವಿಶೇಷ ಟೆಂಟ್ ಶಾಲೆಯಾಗಿದ್ದು, ದೇಶದ ಬಹುತೇಕ ರಾಜ್ಯಗಳ ಅನಕ್ಷರಸ್ತ ನಿರಾಶ್ರಿತ ಕೂಲಿ ಕಾರ್ಮಿಕರ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರ ಸೇವೆ ನಿಜಕ್ಕೂ ಶ್ಲಾಘನೀಯ ಹಾಗೂ ಉಲ್ಲೇಖಾರ್ಹ ಎಂದಿದ್ದಾರೆ. ಒಟ್ಟಾರೆ ಈ ಶಾಲೆ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವಲ್ಲಿ ಒಂದು ಸಾರ್ಥಕ ಪ್ರಯತ್ನವಾಗಿದೆ.
No comments:
Post a Comment