Friday, December 25, 2020

ರಾಜ್ಯ ಯೋಜನಾ ನಿರ್ದೇಶಕರ ನುಡಿ

Admin       Friday, December 25, 2020

                              


       

          ರಾಜ್ಯ ಯೋಜನಾ ನಿರ್ದೇಶಕರ ನುಡಿ

                                                                                                                            - ಎಸ್. ಸೆಲ್ವಕುಮಾರ್ 
ಗುಣಾತ್ಮಕ ಶಿಕ್ಷಣಕ್ಕಾಗಿ ಅಗತ್ಯ ಸುಧಾರಣಾ ಕ್ರಮಗಳು ವಿದ್ಯಾರ್ಥಿಗಳ ಕಲಿಕೆಯ ಸಾಧನೆಯಲ್ಲಿ ಸಕಾರಾತ್ಮಕವಾಗಿ ಪ್ರಗತಿಯನ್ನು ಸಾಧಿಸುವ ಮೂಲಕ ಜೀವನ ಉಪಯುಕ್ತ ಮತ್ತು ಗುಣಾತ್ಮಕ ಶಿಕ್ಷಣ, ಸಾರ್ವತ್ರಿಕವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ದೊರಕುವಂತಾಗಲು ಶಿಕ್ಷಕ ಸಮುದಾಯ, ಉಸ್ತುವಾರಿ ಅಧಿಕಾರಿ ವರ್ಗ ಮತ್ತು ಪೋಷಕ ಸಮುದಾಯವು ಸಂಕಲ್ಪವನ್ನು ಮಾಡುವ ಅನಿವಾರ್ಯತೆ ಪ್ರಸ್ತುತ ಪರಿಸ್ಥಿಯ ಕೈಗನ್ನಡಿಯಾಗಿದೆ. ಸರ್ಕಾರವು ಸಮುದಾಯದ ಸಹಕಾರದೊಂದಿಗೆ ಹತ್ತು ಹಲವು ಕಾರ್ಯಕ್ರಮಗಳು,  ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಸಹ, ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸುವಲ್ಲಿ ಸಂಪೂರ್ಣ ಸಫಲವಾಗಲು ಕಷ್ಟ ಸಾಧ್ಯವೆನಿಸಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ಭಾಗೀದಾರರೂ ತಮ್ಮ ಅಂತರಾವಲೋಕನವನ್ನು ಮಾಡಿಕೊಳ್ಳುವ ಅಗತ್ಯವಿದೆ.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕೆಲವು ಮಹತ್ತರ ಅಂಶಗಳು ಗೋಚರಿಸುತ್ತವೆ. ಶಾಲಾ ಹಂತದಲ್ಲಿ ಕಲಿಕೆಗೆ ಪೂರಕವಾದ ಭಾತಿಕ ಸೌಲಭ್ಯಗಳು, ಶಿಕ್ಷಕರ ಲಭ್ಯತೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿವೇತನ, ಮಧ್ಯಾಹ್ನ ಬಿಸಿಯೂಟ ಯೋಜನೆ ಸೇರಿದಂತೆ ಹಲವಾರು ಉತ್ತೇಜನಗಳನ್ನು ಒದಗಿಸಿದಾಗ್ಯೂ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಾಗ ದಾಖಲಾತಿ ಮತ್ತು ಹಾಜರಾತಿ ಪ್ರಮಾಣದಲ್ಲಿ ಗಣನೀಯ ವ್ಯತ್ಯಯ ಕಂಡುಬರುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ  ಶಾಲೆಗಳಲ್ಲಿಯೂ ಸಹ ಸಾರ್ವತ್ರಿಕ ಮತ್ತು ನಿರೀಕ್ಷಿತ ಪ್ರಮಾಣದ ಕಲಿಕೆಯ ಸಾಧನೆಯು ಸಾಧಿತವಾಗಿರುವುದಿಲ್ಲ. ಈ ಅಂಶಗಳನ್ನು ಎನ್.ಸಿ.ಆರ್.ಟಿ.ಯಂತಹ ಹಲವು ಅಧ್ಯಯನಗಳು ಸಾಬೀತುಪಡಿಸಿರುತ್ತವೆ.

ಶಾಲಾ ಹಂತದಿಂದ ಒದಗಿಸಲಾಗುವ ಅಂಕಿ ಅಂಶಗಳು ಮೇಲ್ಮಟ್ಟದ ಹಂತಗಳಲ್ಲಿ ನಿಖರತೆ, ವಿಶ್ವಸನೀಯತೆ ಮತ್ತು ಸ್ಥಿರತೆಯಲ್ಲಿ ಒಂದು ಹಂತದಿಂದ ಇನ್ನೊಂದು ಹಂತದಲ್ಲಿ ಗೊಂದಲವಿದ್ದು ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ರೂಪಿಸುವಲ್ಲಿ ಅನಗತ್ಯ ವಿಳಂಬ ಮತ್ತು ಅಡಚಣೆಗಳು ಉಂಟಾಗುತ್ತವೆ.


ಶಾಲಾ ಹಂತದಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಗಳು ಫಲಪ್ರದವಾಗಿ ಮೂಡುವಲ್ಲಿ ಉಸ್ತುವಾರಿ ಮತ್ತು ಮೇಲ್ವಿಚಾರಣೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಪೋಷಕರನ್ನು ಪ್ರತಿನಿಧಿಸುವ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ) ಗಳು ಶಿಕ್ಷಕರ ಹಾಜರಾತಿ, ವಿದ್ಯಾರ್ಥಿಗಳ ದಾಖಲಾತಿ-ಹಾಜರಾತಿ, ಕಲಿಕೆಯ ಪ್ರಗತಿ ಸೇರಿದಂತೆ ಶಾಲೆಗಳ ಸರ್ವತೋಮುಖವಾದ ಅಭಿವೃದ್ಧಿ ಕಾರ್ಯಗಳಲ್ಲಿ ಜವಾಬ್ದಾರಿಯುತವಾಗಿ ನಿರ್ವಹಣೆಯನ್ನು ಮಾಡಬೇಕಾಗಿರುತ್ತದೆ. ಆದರೆ ವಾಸ್ತವವಾಗಿ
ಎಲ್ಲಾ ಎಸ್.ಡಿ.ಎಂ.ಸಿ/ಸಮುದಾಯವು ನಿರೀಕ್ಷಿತ ಕಾಳಜಿಯೊಂದಿಗೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವುದು ವಿರಳವಾಗಿರುತ್ತದೆ. ಅದೇ ರೀತಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳೂ ಸಹ ತಮ್ಮ ವ್ಯಾಪ್ತಿಯ ಶಾಲೆಗಳ ಗುಣಾತ್ಮಕ ಕಲಿಕೆಯ ಸಾಧನೆಗೆ ಪೂರಕವಾದ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿಯ ವಿಶ್ಲೇಷಣೆ ಮತ್ತು ಅನುಪಾಲನೆಯ ಕ್ರಮಗಳನ್ನು ಅನುಸರಿಸುತ್ತಿರುವುದು ಕೇವಲ ಯಾಂತ್ರಿಕವಾಗಿದ್ದು ಯಶಸ್ವಿಯಾಗಿರುವುದಿಲ್ಲ.

ಇಂತಹ  ಕ್ಲಸ್ಟರ್,  ಬ್ಲಾಕ್  ಮತ್ತು  ಜಿಲ್ಲಾ  ಹಂತದ ಸಂಪನ್ಮೂಲ ಕೇಂದ್ರಗಳು ಸೇವಾನಿರತ ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಕ್ರಮಗಳಲ್ಲಿ ಅಗತ್ಯ ಆಧಾರಿತ ಯೋಜನೆ, ಅನುಷ್ಠಾನ, ಉಸ್ತುವಾರಿ ಮತ್ತು ಅನುಪಾಲನೆಯನ್ನು ಕ್ರಮಬದ್ಧವಾಗಿ ನಿರ್ವಹಿಸದಿರುವುದು ಶಿಕ್ಷಕರ ವೃತ್ತಿಪರತೆಯನ್ನು ಉತ್ತಮಪಡಿಸುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸದಿರುವುದು ಕಂಡುಬರುತ್ತದೆ.  ಬೋಧನೆ-ಕಲಿಕೆ,  ಮತ್ತು  ಮೌಲ್ಯಮಾಪನ ಪ್ರಕ್ರಿಯೆಗಳು ನಿರಂತರ, ವ್ಯಾಪಕ ಹಾಗೂ ಕ್ರಿಯಾಶೀಲತೆಯಿಂದ ಕೂಡಿರುವುದು ಅಪೇಕ್ಷಣೀಯ. ವಿದ್ಯಾರ್ಥಿಗಳ ಕಲಿಕೆ ಹಾಗೂ ಸಾಧನೆಯನ್ನು ಒರೆಗೆ ಹಚ್ಚುವ ಮೌಲ್ಯಮಾಪನ ಕ್ರಮಗಳು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಶಾಲಾ ಹಂತದ ಪರೀಕ್ಷೆಗಳು, ಕೆ.ಎಸ್. ಕ್ಯೂ.ಎ.ಓ.  ಎನ್.ಸಿ.ಇ.ಆರ್.ಟಿ,  ಅಪರ್ ಅಧ್ಯಯನದಂತಹ ಬಾಹ್ಯ ಮೌಲ್ಯಮಾಪನದ ಫಲಶೃತಿಗಳಿಗೆ ಹೋಲಿಸಿದಾಗ, ಅತ್ಯಂತ ಅಂತರವಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಾಗಬೇಕಿದ್ದು, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) 2005ರ ಅನ್ವಯ ಪ್ರಮುಖವಾಗಿ ಕೆಳಕಂಡ ಅಂಶಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
1. ಶಿಕ್ಷಕ ಕೇಂದ್ರಿತ ವ್ಯವಸ್ಥೆಯಿಂದ ಶಿಶು ಕೇಂದ್ರಿತ ವ್ಯವಸ್ಥೆಯೆಡೆಗೆ,  
2. ಸ್ಥಿರ  ವಿನ್ಯಾಸದಿಂದ  ಸಲಿಲತೆಯ ಪ್ರಕ್ರಿಯೆಯೆಡೆಗೆ, 
3. ಶಿಕ್ಷಕರ ನಿರ್ಣಯ, ನಿರ್ಧಾರಗಳಿಂದ ವಿದ್ಯಾರ್ಥಿಗಳ ಸ್ವಾಯತ್ತತೆಯೆಡೆಗೆ
4. ಶಿಕ್ಷಕರ ಮಾರ್ಗದರ್ಶನ ಮತ್ತು ಉಸ್ತುವಾರಿಯಿಂದ ಕಲಿಕೆಗೆ ಸಹಕರಿಸುವ, ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ದಿಸೆಯೆಡೆಗೆ, 
5. ಕಲಿಕೆಯಲ್ಲಿ ಕ್ರಿಯಾತ್ಮಕವಲ್ಲದ ಅಂಶಗಳಿಂದ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯೆಡೆಗೆ, 
6. ಶಾಲೆಯ ಕೇವಲ ನಾಲ್ಕು ಗೋಡೆಗಳ ನಡುವಿನ ಕಲಿಕೆಗಿಂತ, ವ್ಯಾಪಕ ಸಾಮಾಜಿಕ ಸನ್ನಿವೇಶದಲ್ಲಿ ಚಟುವಟಿಕೆಯಾಧಾರಿತ ಕಲಿಕೆಯೆಡೆಗೆ,
7. ಸ್ಥಿರತೆಯಿಂದ ಸೃಜನಶೀಲತೆಯೆಡೆಗೆ, 

8. ಸಂಕುಚಿತ ಹಾಗೂ ಸೂಕ್ಷ್ಮ ಅವಕೋಕನದಿಂದ ವ್ಯಾಪಕ ಮತ್ತು ಸಮಗ್ರ ದೃಷ್ಟಿಕೋನದೆಡೆಗೆ, 
9. ಸಂಕ್ಷಿಪ್ತ ಮಾಪನದಿಂದ ನಿರಂತರ ಮಾಪನದೆಡೆಗೆ.


ಈ ಮೇಲಿನ ಅಂಶಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಪರಿಸರ ಹಾಗೂ ಅಗತ್ಯ ಕಲಿಕೆಯ ಸಮಯ ವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಸಾಧನೆಯು ತೃಪ್ತಿಕರ ಮಟ್ಟವನ್ನು ಸಾಧಿಸುವಲ್ಲಿ ಶಿಕ್ಷಕರು ಮತ್ತು ಎಲ್ಲಾ ಭಾಗೀದಾರರ ಬದ್ಧತೆ, ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಈ ದಿಸೆಯಲ್ಲಿ ಇಡೀ ಶಿಕ್ಷಕ ಸಮುದಾಯವು ಎಲ್ಲರ ಸಹಕಾರಿದೊಂದಿಗೆ ಶಾಲೆಗಳ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಜೀವನ, ಉಸ್ತುವಾರಿ ಮತ್ತು ಗುಣಾತ್ಮಕ ಶಿಕ್ಷಕವನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಕೋರುತ್ತೇನೆ.
 

logoblog

Thanks for reading ರಾಜ್ಯ ಯೋಜನಾ ನಿರ್ದೇಶಕರ ನುಡಿ

Previous
« Prev Post

No comments:

Post a Comment