Saturday, January 2, 2021

ಮಕ್ಕಳಿಗೆ 'ವನಭೋಜನ'ವೆಂಬ ಸವಿರುಚಿ

Admin       Saturday, January 2, 2021

       


         ಮಕ್ಕಳಿಗೆ  'ವನಭೋಜನ'ವೆಂಬ ಸವಿರುಚಿ

ಪ್ರತಿವರ್ಷ ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ಸರ್ವೆಸಾಮಾನ್ಯ.  ಪ್ರವಾಸವೆಂದರೆ ಮಕ್ಕಳಿಗೂ ಖುಷಿ.  ಆಹಾರ ಖರ್ಚು-ವೆಚ್ಚಗಳನ್ನು ಭರಿಸಿಕೊಂಡು ಪ್ರಯಾಣ ಹೊರಡುವುದು ಒಂದು ಪ್ರಯಾಸದ ಕೆಲಸವೆ ಸರಿ.  ದೂರ ಪ್ರಯಾಣ, ಅಪಾರ ಖರ್ಚು, ಶ್ರಮ, ಸಮಯ ನಷ್ಟ. ಈ ನಿಟ್ಟಿನಲ್ಲಿ ನೋಡುವುದಾದರೆ ನಮ್ಮ ಕಣ್ಣಿಗೆ ಬೀಳುವುದು ಪ್ರಯಾಸ ರಹಿತ, ಪ್ರಯಾಣ ರಹಿತ,

ಖರ್ಚು ಇಲ್ಲದ ವನಭೋಜನ ಅಥವಾ ವನವಿಹಾರವೆಂಬ ಪಿಕ್ನಿಕ್.

ಈ ಪಿಕ್ನಿಕ್ ಅಥವಾ ವನವಿಹಾರವನ್ನು ಪ್ರತಿ ಊರಿನ ಪ್ರತಿ ಶಾಲೆಗಳಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಹಮ್ಮಿಕೊಂಡರೆ ಮಕ್ಕಳ ಶೈಕ್ಷಣಿಕ ಕಲಿಕೆ, ಪ್ರಕೃತಿ-ಪರಿಸರ, ಗುಣಮಟ್ಟದ ಕಲಿಕೆ,

ಗುಣಾತ್ಮಕ ಕಲಿಕೆಗಳಂತಹ ಆಧುನಿಕ ಕಲಿಕಾ ಅಂಶಗಳಿಗೆ ಒತ್ತು ಕೊಡಬಹುದಾಗಿದೆ.   ವನವಿಹಾರವನ್ನು ಕೈಗೊಳ್ಳಲು ಹೆಚ್ಚುದಿನಗಳನ್ನು ಹಿಡಿಯುವುದಿಲ್ಲ ,ಯಾವ ಖರ್ಚುಗಳೂ ಬರುವುದಿಲ್ಲ, ಹೆಚ್ಚು ದೂರವೂ ಪ್ರಯಾಣಿಸಬೇಕಾಗಿಲ್ಲ.

ಪ್ರತಿ ಊರಿನ ಶಾಲೆಯ ಸುತ್ತಮುತ್ತಲೂ ಇರುವ ಕಾಡು, ತೋಪು, ತೆಂಗಿನತೋಟ, ಅಡಿಕೆ ತೋಟ, ಕೆರೆ ಬಯಲು ದನ ಮೇಯುವ ತಕ್ಕಲು, ಹೊಲಗದ್ದೆಗಳು, ಊರಿನ ವೈಭವ ಸಾರುವ ದೇವಸ್ಥಾನ, ಹಳೆಯ ಕೋಟೆ ಕೊತ್ತಲುಗಳು, ಬೆಟ್ಟ- ಗುಡ್ಡಗಳು, ಸಣ್ಣ ಝರಿ, ಜಲಪಾತ, ಊರ ಹಿರಿಯರ ದೊಡ್ಡಮನೆ, ಸ್ವಾತಂತ್ರ್ಯಯೋಧರ ಮನೆ............. ಮುಂತಾದ ಹಲವು ಸ್ಥಳಗಳಲ್ಲಿ ತಮಗೆ ಯಾವುದು ಬೇಕೋ ಅಥವಾ ತಮ್ಮ ಊರಿನ ಶಾಲೆಯ ಸ್ಥಳೀಯತೆಗೆ ಅನುಗುಣವಾಗಿ ಬೇಕಾದುದನ್ನು ಆರಿಸಿಕೊಂಡು ಒಂದುದಿನದ ವನವಿಹಾರ ಅಥವಾ ಪಿಕ್ನಿಕ್ ಕೈಗೊಳ್ಳಬಹುದು.

ಇಂತಹ ವನವಿಹಾರ, ಹೊರಸಂಚಾರ, ಪಿಕ್ನಿಕ್ ಏನೇ ಆಗಿರಲಿ ಸ್ಥಳೀಯ ಅವಶ್ಯಕತೆಗಳನ್ನು ಸ್ಥಳೀಯ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಊರಿನ ಪರಿಸರ ಮಕ್ಕಳಿಗೆ ಕಲಿಸಿಕೊಡುವುದೇನು, ಅದರಿಂದ ಮಗುವಿನ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಗಮನಿಸಿಕೊಂಡು ಅಗತ್ಯ ಶೈಕ್ಷಣಿಕ ಪ್ರಭಾವ ಬೀರುವ ಮಕ್ಕಳ ವ್ಯಕ್ತಿತ್ವವನ್ನು ವಿಕಸಿತವಾಗಲು ಅವರ ಸೃಜನಶೀಲ ಕಾರ್ಯ ಚಟುವಟಿಕೆಗಳಿಗೆ ಇಂಬು ನೀಡುವ ಸ್ಥಳಗಳಿಗೆ ಭೇಟಿಯನ್ನು ಕೈಗೊಳ್ಳಬಹುದು. ಇದನ್ನು ಒಂದು ದಿನದ ವನಭೋಜನ ವೆಂದೆ ತಿಳಿದು ಭೋಜನ ವ್ಯವಸ್ಥೆಯನ್ನು ಕೈಗೊಳ್ಳಬಹುದು.  ಇಡೀ ಒಟ್ಟಾರೆ ಈ ಒಂದು ದಿನದ  ಕಾರ್ಯಕವನ್ನು  ವನಭೋಜನವೆಂದು ಕರೆದು, ಒಂದುಮರದಡಿಯೊ, ತೋಪಿನಲ್ಲೊ, ಕೋಟೆ ಕೊತ್ತಲಗಳ ಅನುಕೂಲಕರ ಜಾಗದಲ್ಲಿ ಶಿಕಕ್ಷರು ಮಕ್ಕಳನ್ನು ಒಟ್ಟಿಗೆ ಕೂರಿಸಿ ಸಹಪಂಕ್ತಿಭೋಜನ ಮಾಡಬಹುದು . ಇದರಿಂದ ಮಕ್ಕಳಿಗೂಖುಷಿ. ಶಿಕಕ್ಷರಿಗೂ ಹೊಸರೀತಿಯ ವಾತಾವರಣ ಮೂಡಿಸಿದ ಹೆಮ್ಮೆ.  ಊಟಕ್ಕೆ ಮೊದಲು

ಮತ್ತು ನಂತರ ಅಲ್ಲಿಯೇ ಇಡೀ ದಿನ ಸ್ಥಳೀಯ ವನಭೋಜನ ದ ಪರಿಸರದಲ್ಲೆ ಮಕ್ಕಳಿಗೆ ಕಲಿಕೆಯನ್ನು ಆರಂಭಿಸಬಹುದು.

ಅಡುಗೆಗೆ ಅಗತ್ಯ ಸಿದ್ದತಗೆಳನ್ನು ಮಕ್ಕಳು ಕಲಿತುಕೊಳ್ಳುತ್ತಾರೆ,ತೋಟಗಳಿದ್ದರೆ ಅಲ್ಲಿಂದಲೆ ತರಕಾರಿಗಳನ್ನು ತಂದು ಮಕ್ಕಳೆ ಕಿತ್ತು ತರುವ ವ್ಯವಸ್ಥೆ ಮಾಡುವುದರಿಂದ ತರಕಾರಿಗಳ ಹೆಸರು ತಿಳಿಯುತ್ತದೆ.  ಅವುಗಳನ್ನು ಬೆಳೆಯುವ ರೀತಿಯ ಬಗ್ಗೆ ಅಲ್ಲಿಯ ರೈತರಿಂದಲೆ ಮಾರ್ಗದರ್ಶನ ಪಾಠ ಹೇಳಿಸಬಹುದು.    ಅಲ್ಲದೆ ಆ ಊರಿನ ಜಾನಪದ ತಜ್ಞ ಅಜ್ಜಿಯೊ, ಅಜ್ಜನೊ ಯಾರಾದರೂ ಇದ್ದರೆ ಅವರಿಂದ ಜಾನಪದ ಕಥೆಗಳನ್ನು ಹೇಳಿಸಬಹುದು.ಮಕ್ಕಳನ್ನು ಬಯಲುಗಳಲ್ಲಿ ಗುಂಪು ಗುಂಪಾಗಿ, ಚೌಕಾಬಾರ, ಲಗೋರಿ, ಅಳುಗುಣಿಮಣೆ ಆಟ, ಚಿಣ್ಣಿದಾಂಡು, ಕ್ರಿಕೆಟ್, ಕಬಡ್ಡಿ,

ಖೊಖೊ ಮುಂತಾದ ಆಟಗಳನ್ನು ಆಡಿಸಬಹುದು. ಇವುಗಳಲ್ಲದೆ ಹಗ್ಗದಾಟ, ಮಣ್ಣಿನಲ್ಲಿ ಬೊಂಬೆಗಳನ್ನು ತಯಾರಿಸುವ ಆಟ, ಶೈಕ್ಷಣಿಕ ಸಾಧನ ತಯಾರಿಸುವ ಆಟ, ಬೋಧನೋಪಕರಣಗಳ ತಯಾರಿಕೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.

ಪಶು-ಪಕ್ಷಿ, ಮರ-ಗಿಡಗಳನ್ನು ಗುರುತಿಸುವ ಆಟ, ಗಿಡಗಳನ್ನು ನೆಡುವ ಕಾರ್ಯಚಟುವಟಿಕೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.   ಸಸ್ಯಶಾಸ್ತ್ರ ಪಾಠ- ಕ್ಕೆ ಸಂಬಂಧಿಸಿದಂತೆ ವಿವಿಧ ಬೆಳೆಗಳ ಪ್ರಾತ್ಯಕ್ಷ್ಷಿಕೆ ತೋರಿಸುವುದು ಇದರಿಂದ ಮಗುವಿಗೆ ಪ್ರಕೃತಿಯೊಡನೆ ನೈಜಪಾಠ ದೊರೆಯುತ್ತದೆ. ಪ್ರಕೃತಿಯನ್ನು ನೋಡಿ, ಮಗು ವಾತಾವರಣವನ್ನು ಆಸ್ವಾದಿಸುತ್ತದೆ. ಇಲ್ಲಿಯೇ ಸಂತಸದ ಕಲಿಕೆ, ಸ್ವವೇಗದ ಕಲಿಕೆಯೂ ಆಗುತ್ತದೆ.

ಇದಷ್ಟೆ ಅಲ್ಲದೆ, ವನಭೋಜನದಲ್ಲಿ ಸ್ವಾತಂತ್ರ್ಯ ಯೋಧನ್ನು ಕರೆಯಿಸಿ ಸ್ಥಳದಲ್ಲೆ ಭಾಷಣವನ್ನು ಮಾಡಿಸಬಹುದು.  ಊರಿನ ಹಿರಿಯರನ್ನು ಕರೆಯಿಸಿ ಅಲ್ಲಿಯ ದೇವಸ್ಥಾನ, ಕೋಟೆ ಕೊತ್ತಲಗಳ

ಬಗ್ಗೆ ಮಾಹಿತಿ ಪಡೆಯಬಹುದು.  ಕೃಷಿ, ಕೈಗಾರಿಕೆ ನೀರಾವರಿ, ಕೋಳಿಸಾಕಣೆ, ಮೀನುಗಾರಿಕೆ, ಹೈನುಗಾರಿಕೆ, ಸ್ಥಳೀಯ ಗುಡಿ ಕೈಗಾರಿಕೆಗಳಾದ ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ ಮುಂತಾದ

ಹಲವು ಉದ್ಯಮಗಳ ಪರಿಚಯ ಮಾಡಿಕೊಡಬಹುದು. ಇದರಿಂದ ಮಕ್ಕಳಿಗೆ ಜ್ಞಾನ, ತಿಳುವಳಿಕೆ, ಕೌಶಲಗಳು ಸ್ಥಳೀಯವಾಗಿಯೆ ಲಭ್ಯವಾಗಿ ಅನ್ವಯಿಸಿಕೊಳ್ಳುವ ಕೌಶಲ್ಯ ವೃದ್ಧಿಸಿಕೊಳ್ಳುವರು.

ಇದರಿಂದಾಗಿ ತರಗತಿಯ ಏಕತಾನತೆ ದೂರವಾಗಿ ಹೊಸ ವಾತಾವರಣ ಉಂಟಾಗುತ್ತದೆ.ಮಕ್ಕಳಲ್ಲಿ ಕಲಿಕೆ ಸಂತಸದಾಯಕವಾಗುವುದಲ್ಲದೆ,ಶಾಲೆಯ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಸಮಾಜ ಮತ್ತು ಶಾಲೆಯ ನಡುವಣ ಸಂಬಂಧ ಹೆಚ್ಚಾಗುತ್ತದೆ. ಇದರಿಂದ ಪೋಷಕರಿಗೂ ಖುಷಿಯಾಗಿ ಹೊಸ ಬೋಧನಾ ವಿಧಾನಗಳ ಬಗ್ಗೆ, ಕಾರ್ಯಚಟುವಟಿಕೆಗಳ ಬಗ್ಗೆ ಹೆಮ್ಮೆ ಮೂಡುತ್ತದೆ.  ಮಧ್ಯಾಹ್ನದ ಬಿಸಿಯೂಟದ ಸಮರ್ಪಕ ಸದುಪಯೋಗವೂ ಆಗುತ್ತದೆ.

ಈ ರೀತಿಯ ಚಟುವಟಿಕೆಗಳನ್ನು ಕೆಲವು ಕುಟುಂಬಗಳು ತಮ್ಮ ಕೌಟುಂಬಿಕ ವಾತಾವರಣದಲ್ಲಿ ಕೈಗೊಳ್ಳುವುದುಂಟು.  ಅಲ್ಲದೆ ಹಿಂದೆ ಹಲವು ಶಾಲೆಗಳಲ್ಲಿ ಈ ರೀತಿಯ ವನಭೋಜನ, ವನಸಂಚಾರ ವ್ಯವಸ್ಥೆ ಅಲ್ಲಲ್ಲಿ ಇತ್ತು.  ಇದನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಅಳವಡಿಸಿಕೊಂಡರೆ ಕಲಿಕೆಯ ವಾತಾವರಣಕ್ಕೆ ಹೊಸ ಆಯಾಮ ದೊರೆಯುತ್ತದೆ.  ಹೆಚ್ಚು ಖರ್ಚು ಇಲ್ಲದ ಪ್ರಯಾಸವೂ ಇಲ್ಲದ, ಪ್ರಯಾಣವೂ ಇಲ್ಲದ ಪ್ರವಾಸವನ್ನು ಮಾಡಿದ ತೃಪ್ತಿ ಬರುತ್ತದೆ. ಮಕ್ಕಳ ಮನಸ್ಸು ಉಲ್ಲಾಸಗೊಳ್ಳುತ್ತದೆ. ಭಾವನೆಗಳು ಅರಳುತ್ತವೆ. ಭಾಷೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ತಾನು ಅನುಭವಿಸದ ಆನಂದದ ಗಳಿಗೆಗಳನ್ನು ಇತರರೊಡನೆ, ಹಂಚಿಕೊಂಡಂತಾಗುತ್ತದೆ. ವನಭೋಜನ ಸಹ ಭೋಜನವಾಗಿ ಪ್ರಕೃತಿಯ ಮಡಿಲಲ್ಲಿ ಗಿಡ-ಮರ ಬಳ್ಳಿಗಳಂತೆ, ಹಕ್ಕಿಗಳಂತೆ ನಾವೆಲ್ಲರೂ ಒಂದು; ಪ್ರಕೃತಿಯ ಮಾತೆಯ ಒಡಲಲ್ಲಿ ಸಮಾನರು ಎಂಬ ಭಾವನೆ ಬರುತ್ತದೆ.  ತಮ್ಮ ಮಧುರ ಭಾವನೆಗಳ ಸಮಾಗಮ ಹಸಿರಾಗಿ, ಹಸಿರೇ ಉಸಿರಾಗಿ ಚಿರಕಾಲ ಉಳಿಯುತ್ತದೆ. ಮಕ್ಕಳ ನೆನಪಿನಂಗಳದಲ್ಲಿ ಮಾಸದ ನೆನಪಾಗಿ ಅಚ್ಚಳಿಯದೆ ಉಳಿಯುತ್ತವೆ. 


logoblog

Thanks for reading ಮಕ್ಕಳಿಗೆ 'ವನಭೋಜನ'ವೆಂಬ ಸವಿರುಚಿ

Previous
« Prev Post

No comments:

Post a Comment